URA writes about Lankesh’s munnudi
ಯು.ಆರ್. ಅನಂತಮೂರ್ತಿ
‘ಅಕ್ಷರ ಹೊಸ ಕಾವ್ಯ’ದ ಮುನ್ನುಡಿಯಾಗಿ ಲಂಕೇಶರು ಆಡಿರುವ ಮಾತುಗಳಲ್ಲಿ ಅಡಿಗೋತ್ತರ ಕವಿಗಳಲ್ಲಿ
ಕೆಲವರನ್ನು ‘ಹಿಪ್ಪೀ’ಗಳೆಂದು ಕರೆದದ್ದು ನೋಡಿ ನನಗೆ ಆಶ್ಚರ್ಯವಾಗಿದೆ. ಅವರ
ಗಮನದಲ್ಲಿರುವ ‘ಹಿಪ್ಪೀ’
ಕವಿಗಳು ಇವರು: ಲಕ್ಷ್ಮಣರಾವ್, ಸುಮತೀಂದ್ರ, ಕಂಬಾರ, ಚನ್ನಯ್ಯ ಮತ್ತು ತಿರುಮಲೇಶ್.
ತಿರುಮಲೇಶರ ಐರನಿ, ಕಂಬಾರರ ರಭಸ, ಚನ್ನಯ್ಯನವರು ತಮ್ಮ ಕವನಗಳಲ್ಲಿ ಮನಸ್ಸಿನ ಕೆಲವು
ಗೂಢ ಅವಸ್ಥೆಗಳನ್ನು ನಿರ್ಲಪ್ತವಾಗಿ ಅರಿಯಲು ಮೂಡುತ್ತಿರುವ ಪ್ರಯತ್ನ- ಇವು ಭರವಸೆ
ಹುಟ್ಟಿಸುತ್ತವೆ.
ಆದ್ದರಿಂದ ಇವರನ್ನು ಬಿಟ್ಟು ನನ್ನ ಮುಂದಿನ ಮಾತುಗಳನ್ನು ಆಡಬಯಸುತ್ತೇನೆ. ಉಳಿದ ಇಬ್ಬರಲ್ಲಿ
ಒಬ್ಬರಾದ ಸುಮತೀಂದ್ರರ ನಿರ್ಬಲತೆ ಮತ್ತು ಸುಕುಮಾರತೆ ಅವರ ಕಾವ್ಯದ ಸಾರ್ಥಕ
ವಸ್ತುಗಳಾಗುವುದಿಲ್ಲ. ಕಾರಣ, ಅವರ ಬರವಣಿಗೆಯೂ ದುರ್ಬಲ ಎನ್ನಿಸುವುದರಿಂದ.
ಬುದ್ಧಿಶಕ್ತಿ ಕಮ್ಮಿಯಾಗಿರುವ ಕಾಲೇಜು ವಿದ್ಯಾರ್ಥಿಯೊಬ್ಬನು ಡೈರಿಯಲ್ಲಿ ಬರೆದುಕೊಂಡ
ಆತ್ಮಮಂಥನ ಅವನ ಉದ್ಧಾರಕ್ಕೆ
ಅವಶ್ಯವಿರಬಹದು; ಆದರೆ ಎಲ್ಲರೂ ಅದನ್ನು ಓದಬೇಕಾದ್ದಿಲ್ಲ. ನಮ್ಮ ಕವಿಗಳಲ್ಲನ್ನೇಕರಿಗೆ ಈ ವಿವೇಕ
ಇಲ್ಲದಿರುವುದರಿಂದಲೇ ನವೋದಯ ನವ್ಯ ಮಾರ್ಗಗಳೆರಡರಲ್ಲೂ ಈ ಕನ್ನಡ ಕಂದರ ವೇದನೆ
ಆಕ್ರೋಶಗಳಿಗೆ ಇಷ್ಟೊಂದು ಪ್ರಾಮುಖ್ಯತೆ ಸಿಕ್ಕುಬಿಟ್ಟಿರುವುದು. ಸುಮತೀಂದ್ರರ ‘ಕಪ್ಪು
ದೇವತೆಯ’ ಕೆಲವು ಸಾರ್ಥಕ ಭಾಗಗಳನ್ನು ನಾನು ಮೆಚ್ಚಿಕೊಂಡಿದ್ದರೂ, ಅವರು ಈ ತನಕ
ಸಾಹಿತ್ಯದಲ್ಲಿ ತತ್ಪರವಾದ ತಪಸ್ಸಿನಿಂದ ಸಾಧಿಸಿದ್ದು ಅಲ್ಪವೆಂದು ನಾನು
ತಿಳಿದಿದ್ದೇನೆ.
ಲೀಲಾರಾವ್ ಎನ್ನುವ ಇನ್ನೊಂದು ಹೆಣ್ಣು ಹೆಸರಿನಲ್ಲಿ ಇವರು ಬರೆದ ಕೆಲವು ಕವನಗಳು ಮನಃಶಾಸ್ತ್ರದ
ದೃಷ್ಟಿಯಿಂದಲಾದರೂ ಕುತೂಹಲಕರವಾಗಿವೆ- ಅಷ್ಟೆ.
ಲಕ್ಷ್ಮಣರಾವ್ರವರ ಬರವಣಿಗೆ ಜಾಣತನದಿಂದ ಕೂಡಿದೆ; ಆದರೆ ಇನ್ನು ಎಳಸು, ಕಾದು
ನೋಡಬೇಕು ಅನ್ನಿಸುತ್ತದೆ. ಸಂಡೇ ಕಾವ್ಯದ ಜಾಣತನದಲ್ಲೇ ಇವರು ತೃಪ್ತರಾಗಿ ಉಳಿದರೆ
ಸಾಲದು. (ಈ ಸಂಡೇ ಕಾವ್ಯಕ್ಕಿಂತ ಇವುಗಳಿಗೆ ಚಿತ್ರ ಬರೆಯುವ ಮೂರ್ತಿಯವರ ಕಲೆಗಾರಿಕೆಯೇ
ಆಕರ್ಷಕವಾಗಿರುತ್ತದೆ ಎಂದು ನನಗೆ ಅನ್ನಿಸಿಸುದ್ದುಂಟು) ತನ್ನ ಸದ್ಯದ ಸ್ಥಿತಿಯನ್ನು
ಕವಿ
ವ್ಯಕ್ತಪಡಿಸಿಕೊಳ್ಳುವುದರ ಜೊತೆಗೇ, ಅದನ್ನು ದಾಟಿ ಹೋಗಲು ಪ್ರಯತ್ನಿಸುತ್ತಾನೆ.
ಇದರಿಂದ ಕಾವ್ಯ ತೀವ್ರವಾಗುತ್ತದೆ ಎಂಬುದರಲ್ಲಿ ತಿಳಿಯದ ಹೊರತು ಲಕ್ಷ್ಮಣರಾವ್ರಂತಹ
ಕವಿಗಳು ನಮ್ಮ ಮನಸ್ಸನ್ನು ದುಡಿಸಿಕೊಳ್ಳುವಂತಹ ಕವನಗಳನ್ನು ಬರೆಯಲಾರರು. “ಜಾಣತನ,
ಕಿಡಿಗೇಡಿತನ, ಪ್ರತಿಭಟನೆ, ಸೃಷ್ಮ್ಯಾತ್ಮಕವಾದ ಪ್ರತಿಭೆ”ಗಳಿಗೆ ತಾನು ಬೆಲೆ
ಕೊಡುತ್ತೇನೆಂಬ ಲಂಕೇಶರು, “ಜಾಣತನ, ಕಿಡಿಗೇಡಿತನ”ಗಳಂದ ಮಾತ್ರ ತೃಪ್ತರಾಗುವಂತೆ ನನಗೆ
ಕಂಡಿದ್ದರಿಂದ ಲಕ್ಷ್ಮಣರಾವ್, ಸುಮತೀಂದ್ರರ ನೆಪದಲ್ಲಿ ಹೀಗೆ ಮಾತು ಬೆಳೆಸಬೇಕಾಯಿತು.
ಒಟ್ಟಿನಲ್ಲಿ ನನಗೆ ಅನುಮಾನ: ಲಂಕೇಶರ ಆದರ್ಶ ಕವಿ ಎಲ್ಲ ಮರ್ಯಾದೆಗಳನ್ನೂ ಮೀರಿನಿಂತ
ಹಿಪ್ಪಿಯಲ್ಲ; ಮಧ್ಯಮ ವರ್ಗದ ಪರಿಮಿತ ಸಂವೇದನೆಯ ಡ್ಯಾಂಡಿ- ಎಂದು. ಪೇಟೆಯ ವಿಲಾಸಿತನ
ಮುಜುಗರದಿಂದ ಹುಟ್ಟಿದ ಹಾಸ್ಯ, ಚಪಲದ ಮಟ್ಟದಲ್ಲಿರುವ ಕಾಮ, ಸ್ತ್ರೀ ಸಹವಾಸಕ್ಕೆ
ಹಾತೊರೆಯುವ ಕಾಲೇಜು ವಿದ್ಯಾರ್ಥಿಗಳಿಗೆ ಪೋಲಿ ಜೋಕು- ಒಟ್ಟಿನಲ್ಲಿ ಮಧ್ಯಮ ವರ್ಗದ
ಅಳ್ಳೆದೆಯೆ
ಅಲ್ಪತನಗಳೇ ಅಡಿಗರ ನಂತರ ಬರೆಯುತ್ತಿರುವ ಕವಿಗಳ ಧಾಟಿಯಾಗಬೇಕೆಂದು ಲಂಕೇಶರು ಭಾವಿಸಿದಂತಿದೆ.
ಅಡಿಗರಿಗಿಂತ ಪ್ರತ್ಯೇಕವಾದ ವ್ಯಕ್ತಿತ್ವ ಸೃಷ್ಟಿಸಿಕೊಳ್ಳಲೆಂದು ಈ ಎಲ್ಲ ಆಟ,
ಚೇಷ್ಟೆಗಳು ಕೆಲವು ಕವಿಗಳಿಗೆ ಅವಶ್ಯವಿರಬಹುದು. ಆದರೆ ಸಂಸ್ಕೃತಿಯ ದೃಷ್ಟಿಯಿಂದ ಈ
ಬಗೆಯ ಸ್ವಂತಿಕೆಯ ಹುಡುಗಾಟ ಅರ್ಥಪೂರ್ಣವಾಗದೇ ಹೋಗಬಹುದು. ಅಡಿಗರ ಕಾವ್ಯದ
ಬೇರುಗಳು ಬ್ರಾಹ್ಮಣ ಧರ್ಮದಲ್ಲಿ, ಹಳೆಗನ್ನಡ ಕಾವ್ಯದಲ್ಲಿ ನಮ್ಮ ಸಮಕಾಲೀನ
ಜೀವನದಲ್ಲಿ, ತನ್ನ ಸ್ವಂತದ ತಳಮಳದಲ್ಲಿ ಇವೆ. ಉಳಿದವರಿಗೆ ಈ ಹಿನ್ನೆಲೆ ಇಲ್ಲ.
ಇರದಿದ್ದರೂ ಸಹ, ಮಧ್ಯಮ ವರ್ಗದ ಅನುಭವ ಹೀನತೆ, ಅಲ್ಪತನ, ಸಪ್ಪೆತನಗಳೇ ಕಾವ್ಯದ
ವಸ್ತುವಾಗಿ ಉತ್ತಮ ಕಾವ್ಯ ಹುಟ್ಟಿ ಬರುವುದೂ ಸಾಧ್ಯ. ಇದಕ್ಕೆ ಅವಶ್ಯವಾದ ಎಚ್ಚರ
ಕೆಲವು ನವ್ಯಕವಿಗಳಲ್ಲಾದರೂ
ಇದೆಯೆಂಬುದನ್ನು ಈ ಚರ್ಚೆಯಲ್ಲಿ ಮರೆಯಕೂಡದು. ಆದರೆ ಲಂಕೇಶರು ಮೆಚ್ಚುವ ಕಿಡಿಗೇಡಿ
ಡ್ಯಾಂಡಿಗೆ ತನ್ನ
ಮಧ್ಯಮ ವರ್ಗತನ, ಅನುಭವದ ಅಲ್ಪತೆಗಳು ಸ್ವತಂತೃಪ್ತಿಯ ವಿಷಯಗಳು. ಹೀಗೆ ನೋವು,
ತೀವ್ರತೆ, ಪರವಶತೆ, ಸಂಕಟಗಳಿಂದ ಬಾಧಿತನಾಗದೆ ಇರುವುದೇ ಪರಮ ಆದರ್ಶವಾಗಿಬಿಟ್ಟರೆ,
‘ಬ್ಲಿಟ್ಸ್’ ಪತ್ರಿಕೆಯಂತೆ ಮಾತಾಡುವುದೇ ನಮ್ಮ ಪ್ರಾಮಾಣಿಕತೆ ವ್ಯಕ್ತವಾಗುವ ಬಗೆಯಾಗಿ
ಬಿಟ್ಟರೆ, ಕಾವ್ಯ ಮುರುಟೆಕೊಳ್ಳುತ್ತದೆ; ಅಥವಾ ಹಲ್ಕ (ಹಗುರ ಎನ್ನುವ ಅರ್ಥದಲ್ಲೂ)
ಆಗುತ್ತದೆ.
ಉತ್ತಮ ಕಾವ್ಯದಲ್ಲಿ ತನಗೆ ಹೊರತಾದ್ದನ್ನು, ಮೀರಿದ್ದನ್ನು ಜೀವನ ದ್ರವ್ಯವಾಗಿ
ಮಾರ್ಪಾಡಿಸಿಕೊಳ್ಳುವ ಕವಿಯ ಹೋರಾಟವನ್ನು ಕಾಣತ್ತೇವೆ. ಆದರೆ ಎಲ್ಲ ಬಗೆಯ (ಈಗಿನ,
ಆಗಿನ) ರೊಮ್ಯಾಂಟಿಕ್ ಕಾವ್ಯದ ದೋಷವೆಂದರೆ ಲೋಲುಪತೆ. ಕೃತಕ ಗಾಂಭೀರ್ಯದಲ್ಲಿ ಸುಳ್ಳು
ಆಧ್ಯಾತ್ಮವನ್ನು ಮಾತಾಡಿ ತಮ್ಮ ಮಧ್ಯಮ ವರ್ಗದ ನೀರಸತೆಯನ್ನು ಮರೆಯುವ ಕವಿಗಳು ಮತ್ತು
ತಮ್ಮ ಮಧ್ಯಮ ವರ್ಗತನವನ್ನು ಮೆರೆಸುವ ಲಂಕೇಶರ ಡ್ಯಾಂಡಿಗಳು- ಇವರ ನಡುವಿನ ವೈರಕ್ಕೆ ಅರ್ಥವಿಲ್ಲ.
ಸೋಗಿನ ಅಧ್ಯಾತ್ಮದ ಟ್ವೇಡಲ್ ಡಮ್ ಒಬ್ಬನಾದರೆ, ಸೊಗಸಿನ ರಸಿಕತೆಯ ಟ್ವೀಡಲ್ ಡೀ
ಇನ್ನೊಬ್ಬ. ಸುಳ್ಳು
ಪ್ರೀತಿ, ಶೃಂಗಾರ, ವೈಭವಗಳನ್ನೊಡ್ಡಿ ನಿತ್ಯ ಜೀವನದ ಒತ್ತಡಗಳನ್ನೂ ದಾರಿದ್ರ್ಯವನ್ನೂ,
ಸಂಕಟಗಳನ್ನೂ,
ಮರೆಮಾಚುವ ಹಿಂದೀ ಚಿತ್ರಗಳಂತೆಯೇ ಇಂಥವರ ಕಾವ್ಯ ಕೂಡ ಅಶ್ಲೀಲ. ಆದ್ದರಿಂದಲೇ ಕಾವ್ಯದಲ್ಲಿ ಮುಕ್ತ
ಸಂವೇದನೆಯಿರಬೇಕೆಂದು ನಾನು ಚಿತ್ತಾಲರ ಸಂಕಲನಕ್ಕೆ ಮುನ್ನುಡಿಯಾಗಿ ಬರೆದದ್ದು. ಆದರೆ
ಲಂಕೇಶರಿಗೆ ಮುಕ್ತ ಸಂವೇದನೆ
ಸೆಂಟಿಮೆಂಟ್ಯಾಲಿಟಿಯಾಗಿ ಕಂಡಿದೆ. ಮುಕ್ತ ಸಂವೇದನೆಯೆಂದರೆ ನಿಸ್ಸಂಕೋಚವಾಗಿ ಜೀವನದ
ಅನುಭವವನ್ನು ಎದುರಿಸುವ, ಸುಳ್ಳು ಗಾಂಭೀರ್ಯದಲ್ಲಾಗಲೀ ಅಥವಾ ಇದಕ್ಕೆ
ಪ್ರತಿಕ್ರಿಯೆಯಾಗಿ ಹುಟ್ಟಿಕೊಳ್ಳುವ ಮುಜುಗರದ ಹಾಸ್ಯದಲ್ಲಾಗಲೀ ತನ್ನ ಶೋಧನೆಯಿಂದ
ವಂಚಿತವಾಗದ ಧೋರಣೆ. ಕೃತಕ ಗಾಂಭೀರ್ಯಕ್ಕೆ ಅಲ್ಪತನವೊಂದೇ ಮದ್ದೆಂದು ತಿಳಿದಿರುವ
ಲಂಕೇಶರು ನನ್ನ ಮಾತನ್ನು ಅಪಾಯಕಾರಿ ಎಂದು ತಿಳಿದದ್ದು ಆಶ್ಚರ್ಯವಲ್ಲ. ಭಾರತದ
ಸ್ವಸಂತೃಪ್ತ ಮಾಧ್ಯಮ ವರ್ಗದ ವೈಚಾರಿಕ
ಮಿತಿಯನ್ನು ಇವರ ಧೋರಣೆ ಎತ್ತಿ ತೋರಿಸುತ್ತದೆ- ಅಷ್ಟೆ. ಹಿಪ್ಪಿ ಏನೇ ಇರಲಿ- ಪುಣ್ಯ
ಸಂಪಾದನೆಯಲ್ಲಾಗಲೀ,
ಡ್ಯಾಂಡಿಯ ಕಿಡಿಗೇಡಿತನದ ‘ರಸಿಕ’ ಚೇಷ್ಟೆಗಳಲ್ಲಾಗಲೀ ತೊಡಗಿರುವ ಲಂಕೇಶರ ಮಧ್ಯಮ ವರ್ಗದ ಪಳಗಿದ
ಪ್ರಾಣಿಯಂತೂ ಖಂಡಿತಾ ಅಲ್ಲ. ಯಾವುದು ‘ಜೀವಂತ’ ಎಂದು ನಿರ್ಣಯಿಸುವಲ್ಲಿ, ಪುಟಗಳನ್ನು
ಹಂಚುವಲ್ಲಿ ಲಂಕೇಶರ ವಿಮರ್ಶಾ ತತ್ವಗಳು ಕೆಲಸ ಮಾಡಿವೆಯಾದ್ದರಿಂದ ಮೇಲಿನ ಈ
ಮಾತುಗಳನ್ನು ಬರೆಯಬೇಕಾಯಿತು.
ಗೋಕಾಕರನ್ನು ಸಂಕಲನಕ್ಕೆ ಸೇರಿಸದ ಇವರ ಧೋರಣೆ ವಿಮರ್ಶೆಗೆ ಅವಶ್ಯಕವಾದ
ನಿಷ್ಠುರತನದ್ದೋ ಅಥವಾ ಚೇಷ್ಟೆ ವ್ಯಂಗ್ಯ ಕಂಡಕೂಡಲೇ ದ್ರವಿಸಿಬಿಡುವ ಇವರ ಸಂವೇದನೆ
ಅತಿ ಔದಾರ್ಯದ್ದೋ ಅಥವಾ ನವ್ಯ ಸಾಹಿತ್ಯಕ್ಕೂ ರಾಜಕಾರಣ ಪ್ರವೇಶಿಸಿ
ಇದೂ ಪ್ರಗತಿಶೀಲ ಚಳುಳಿಯಂತಾಗಿ ಬಿಡುತ್ತದೆಯೋ ಎಂದು ಲಂಕೇಶರ ‘ಅಕ್ಷರ ಹೊಸ ಕಾವ್ಯ’ ಸಂಕಲವನ್ನು
ತಿರುವಿ ಹಾಕುತ್ತಿದ್ದಂತೆ ಅನುಮಾನವಾಗುತ್ತದೆ.
ನಿಸಾರ್, ಪಾಟೀಲ, ಕಂಬಾರ, ತಿರುಮಲೇಶ್, ತೇಜಸ್ವಿ, ಲಕ್ಷ್ಮಿನಾರಾಯಣ ಭಟ್ಟ, ಚನ್ನಯ್ಯ
ಇತ್ಯಾದಿ ಯುವಕ
ಲೇಖಕರು ತಮ್ಮ ವ್ಯಕ್ತಿತ್ವಕ್ಕೆ ಗಟ್ಟಿಯಾದದ್ದು ಯಾವುದು ಎಂಬುದನ್ನು
ಹುಡುಕಿಕೊಳ್ಳುತ್ತಿದ್ದಾರೆ. ಇವರಿಗಿಂತ
ಕಿರಿಯರಾದ ಆಲನಹಳ್ಳಿ ಕೃಷ್ಣ, ಚೊಕ್ಕಾಡಿ, ರಾಮಚಂದ್ರದೇವ, ರಾಮದಾಸ್, ದೇವನೂರು ಮಹದೇವ
ಇತ್ಯಾದಿ ಸತ್ವಶಾಲಿಗಳಾದ ಕವಿಗಳೂ ಇದ್ದಾರೆ. ಇವರನ್ನೆಲ್ಲ ಓದುತ್ತಿರುವಂತೆ ಈಗಿನ
ಕವಿಗಳು ಎಷ್ಟು ದಕ್ಷತನದಿಂದ ಬರೆಯಬಲ್ಲರು ಎನ್ನುವುದನ್ನು ಜೊತೆಗೇ ಇವರು ತಮ್ಮ
ವ್ಯಕ್ತಿತ್ವಕ್ಕೆ ಸಹಜವಾದ, ಅವಶ್ಯವಾದ ಜೀವನ ದ್ರವ್ಯಕ್ಕೆ ಈತನಕ
ಅರ್ಥಪೂರ್ಣವಾದ ರೂಪು ಕೊಡಲಾರದೆ ಹೋಗಿದ್ದರೆಂದೂ ಅನ್ನಿಸುತ್ತದೆ. ಈ ಕವಿಗಳಲ್ಲೆಲ್ಲ
ನಾನು ಮೆಚ್ಚಿಕೊಂಡಿರುವ ಗುಣವೆಂದರೆ- ಅವರಿಗೆ ತಮ್ಮ ಬಗೆಗೇ ಇರುವ ಅತೃಪ್ತಿ. ಈ ಕವಿಗಳ
ನಡುವೆ ಲಕ್ಷ್ಮಣರಾವ್ ಒಬ್ಬರನ್ನು ಮಾತ್ರ ಹೊಗಳಲು
ಎತ್ತಿಕೊಂಡದ್ದು ಲಂಕೇಶರ ಪರಿಮಿತ ಸಂವೇದನೆಗೆ ಉದಾಹರಣೆಯಾಗಿದೆ. ಲಂಕೇಶರಿಗೆ
ಸಂರ್ಕೀರ್ಣವಾದದ್ದು, ತೀವ್ರವಾದದ್ದು ಬೇಡ; ಸಲೀಸಾದ್ದು ಬೇಕು. ಅಲ್ಲದೆ ತನ್ನ
ಮಾರ್ಗದಲ್ಲಿ ಬರೆಯುತ್ತಿರುವವರನ್ನು ಹುರಿದುಂಬಿಸುವುದು ಬೇಕು. ಆದರೆ ಲಂಕೇಶರ ಕಾವ್ಯ
ಶೈಲಿಯ ಜರ್ನಲಿಸ್ಟ್ ಸದ್ಯತನ, ಗತ್ತು, ತತ್ಪರತೆಗಳನ್ನಾಗಲಿ, ರಾಮಾನುಜರ ಸೂಕ್ಷ್ಮ
ಕಲೆಗಾರಿಕೆಯನ್ನಾಗಲಿ ಹೊಂದಿರದ ಲಕ್ಷ್ಮಣರಾವ್ ತನ್ನ ತನದ ಶೋಧನೆಯಲ್ಲಿ ಇನ್ನೂ ಬಹಳ
ಕಷ್ಟದ ದಾರಿಯನ್ನು ತುಳಿಯಬೇಕಾದಿದೆ ಎಂಬುದನ್ನು
ಮರೆಯಕೂಡದು.
ಅಡಿಗರ ನಂತರ ಬರೆಯುತ್ತಿರುವ ಈ ಎಲ್ಲರೂ (ಇವರಲ್ಲೆಲ್ಲ ಹೆಚ್ಚು ಪ್ರತಿಭಾಶಾಲಿಗಳಾದ
ಕಂಬಾರರೂ ಸಹ) ಉತ್ತಮ ಬಿಡಿ ಕವನಗಳನ್ನೂ ಮಾತ್ರ ಈ ತನಕ ಬರೆದಿದ್ದಾರೆ ಎಂದು ನನಗೆ
ಅನ್ನಿಸುತ್ತದೆ. ಒಂದು ಶಿಷ್ಟ ಸಂವೇದನೆಯಾಗಿ, ಅರ್ಥಪೂರ್ಣ ವ್ಯಕ್ತಿತ್ವವಾಗಿ ಇವರಲ್ಲಿ
ಯಾರು ಯಾರು ಬೆಳೆಯಬಲ್ಲರು, ಯಾರು ತಮ್ಮ ಕಲೆಗಾರಿಕೆಯಲ್ಲೆ ಲೋಲುಪರಾಗಿ ನಿಂತು
ಬಿಟ್ಟಾರು,
ಯಾರು ಫ್ಯಾಶನ್ನಿನಲ್ಲಿರುವ ತತ್ವಗಳ ಬೆನ್ನುಹತ್ತಿ ಜಾರಿಕೊಂಡಾರು, ಯಾರು “ಗಹ್ವರದ
ಒಳಗತ್ತಲಲ್ಲಿ ಸುತ್ತಲು ತಡಕಿ ತಡೆದು ನಡೆಯುವ, ನಡೆದು ಮುಗ್ಗರಿಸಿ ಬಿದ್ದೆದ್ದು
ಹರೆವ, ಹರಿಯವ ಜಾಡು ಹಿಡಿವ, ಗುರುತಿಸುವ, ಬೇರ ಬಗೆವ, ಕಳೆದದ್ದನ್ನು ಪಡೆವ,
ಪಡೆದದ್ದಕ್ಕೆ ಪಡಿ ಹತ್ತು ಹಡೆವಕವನದಕರಡು ಸಿದ್ಧಪಡಿಸುವ…” (ಅಡಿಗರ ‘ವರ್ಧಮಾನ’)
ದಿವ್ಯವನ್ನು ಎದುರಿಸಲಾರದೆ ಗೆಳೆಯರ ಪರಸ್ಪರ ಹೊಗಳಿಕೆಯ ಸಹಕಾರೀ ಸಂಸ್ಥೆಗಳಲ್ಲಿ
ಮೈಮರೆತು ಕೂರುತ್ತಾರೆ- ಇವೇ ಇವತ್ತು ವಿಮರ್ಶೆ ಎಚ್ಚರದಿಂದ
ಚರ್ಚಿಸಬೇಕಾದ ವಿಷಯಗಳಾಗಿವೆ. ಆದರೆ ಲಂಕೇಶರು ಎತ್ತಿ ಹಿಡಿಯುವ “ಆಂಟಿ ಹೀರೋ” ಸೋಗಿನ
ಡ್ಯಾಂಡಿ-ಮೌಲ್ಯಗಳು ಈ ಕವಿಗಳಲ್ಲಿ ಹಗುರವಾದದ್ದನ್ನು ಮಾತ್ರ ಮೆಚ್ಚುವಂಥವು. ಅವರು
ನಡೆಯಬೇಕಾದ ಸ್ವಂತಿಕೆಯ ಹಾದಿಯನ್ನು ಸಲೀಸುಗೊಳಿಸುವವಂಥವು.
‘ತೆರೆದ ಬಾಗಿಲು’, ಫೋಟೋಗ್ರಾಫರ್, ‘ಗೋಪಿ ಮತ್ತು ಗಾರಡಲೀನ’ ದಂತದ ಜಾಣ, ಸಾಮಾನ್ಯ ಕವನಗಳಲ್ಲಿ
ಕನ್ನಡ ಕಾವ್ಯದ ಭವಿಷ್ಯವನ್ನು ಕಾಣುವ ಲಂಕೇಶರು ಸಾಹಿತ್ಯದಿಂದ ಅತ್ಯಂತ
ಅಲ್ಪವಾದದ್ದನ್ನು ಅಪೇಕ್ಷಿಸುತ್ತಾರೆಂಬುದರಲ್ಲಿ ಸಂದೇಹವಿಲ್ಲ. ‘ಕೊರವಂಜಿ’
ಜೀವಂತವಾಗಿದ್ದು ಅದರಲ್ಲಿ ಈ ಕವನಗಳು ಬಂದಿದ್ದರೆ ನಾನು ಅವುಗಳನ್ನು ಓದಿ
ಸಂತೋಷಪಡುತ್ತಿದ್ದೆ. ಮನರಂಜನೆ ಯಾರಿಗೆ ಬೇಡ?
ನಮ್ಮ ಸಾಹಿತ್ಯ ಲೋಕದ ದೊಡ್ಡ ಅಪಾಯ ಇನ್ಬ್ರೀಡಿಂಗ್. ಸಾಹಿತಿಗಳು ಇನ್ನಿತರ
ಸಾಹಿತಿಗಳಿಗಾಗಿ ಬರೆಯುವುದೇ ಹೆಚ್ಚು. ಅಡಿಗರ ‘ಭೂತ’, ‘ರಾಮನವಮಿಯ ದಿವಸ’,
‘ಭೂಮಿಗೀತ’ ಇತ್ಯಾದಿ ಕವನಗಳನ್ನು, ಕಾರಂತರ ಕಾದಂಬರಿಗಳನ್ನು,
ಗ್ರಾಮಾಯಣವನ್ನು, ಕಾರ್ನಾಡ್, ಜಿ.ಬಿ. ಜೋಷಿಯವರ ನಾಟಕಗಳನ್ನು ಸಾಹಿತಿಗಳಲ್ಲದವರ ಜೊತೆಯೂ
ಚರ್ಚಿಸಬೇಕು ಎನ್ನಿಸುತ್ತದೆ. ಯಾಕೆಂದರೆ ಇವು ನಾರ್ಸಿಸಸ್ಸಿನಂತೆ ಸ್ವಮಗ್ನವಾದ ಕೃತಿಗಳಲ್ಲ; ನಮ್ಮ
ಸುಖ ದುಃಖಕ್ಕೆ ಕಾರಣವಾದ ಪ್ರಪಂಚದ ಬಗ್ಗೆ ನಮ್ಮ ಅರಿವನ್ನು ಹೆಚ್ಚಿಸಬಲ್ಲ ಕೃತಿಗಳು.
ಈಸ್ತೇಟರ ಕಸರತ್ತು
ಸ್ವತಃ ಸಾಹಿತಿಗಳಾದವರ ಕಸುಬುದಾರಿಕೆಯ ಕುತೂಹಲವನ್ನು ಮಾತ್ರ ಕೆರಳಿಸೀತು. ಚಿತ್ತಾಲರನ್ನು
ಓದುವಾಗ ಅವರ ಕಲೆಗಾರಿಕೆ ಸೀಮಿತವಾದ್ದು ಎಂದು ನನಗೆ ಅನ್ನಿಸಿದರೂ, ಜೀವನ ತತ್ಪರವಾದ ಅವರ ದೃಷ್ಟಿ
ನಮ್ಮ ನವ್ಯರಿಗೆ ಅವಶ್ಯ ಚಿಕಿತ್ಸೆಯಾದೀತು ಎಂದು ನನಗೆ ಮೇಲಿನ ಕಾರಣಗಳಿಂದ
ಅನ್ನಿಸಿದ್ದು. ಗುಂಪುಗಾರಿಕೆ
ತರುವ ಸುಖವನ್ನು ತಿರಸ್ಕರಿಸಿ ಒಂಟಿಯಾಗಿ ನಿಲ್ಲದ ಲೇಖಕ ಎಂದೂ ತನ್ನತನವನ್ನು ಕಂಡುಕೊಳ್ಳಲಾರ;
ಸಾರ್ಥಕ ಕೃತಿಗಳನ್ನು ರಚಿಸಲಾರ. ಆದ್ದರಿಂದ ಹೊಸ ಸಾಹಿತ್ಯಕ್ಕೆ ಲಂಕೇಶರು
ವಹಿಸುತ್ತಿರುವ ವಕೀಲಿಯ ರೀತಿ
(ಹಿಂದಿನ ಅನಕೃ, ನಿರಂಜನರನ್ನು ನೆನಪಿಗೆ ತರುವ ರೀತಿ) ಅಪಾಯಕಾರಿ ಎಂದು ನಾನು ತಿಳಿದಿದ್ದೇನೆ.
-1973ರಲ್ಲಿ ಅಕ್ಷರ ಹೊಸಕಾವ್ಯ ಬಂದ ಅವಧಿಯಲ್ಲಿ ಲಂಕೇಶರು ಕನ್ನಡ ಕಾವ್ಯದ ಕುರಿತು ಅಕ್ಷರ ಕಾವ್ಯದ
ಮುನ್ನುಡಿಯಲ್ಲಿ ಆಡಿರುವ ಮಾತುಗಳಿಗೆ ಯು ಆರ್ ಅನಂತಮೂರ್ತಿಯವರು ಸ್ಪಂದಿಸಿದ ರೀತಿ
ಇದು. ಕನ್ನಡಪ್ರಭದಲ್ಲಿ ಆಗ ಪ್ರಕಟವಾದ ಲೇಖನವನ್ನು ಅವರು ಓದು ಜನಮೇಜಯದಲ್ಲಿ
ಬಳಸಿಕೊಳ್ಳುವುದಕ್ಕೆ ಅನುಮತಿ
ಕೊಟ್ಟಿದ್ದಾರೆ. ಈ ಹಿನ್ನೆಲೆಯ ಕುರಿತು ಅವರ ಪುಟ್ಟ ಸಂದರ್ಶನವೊಂದು ಇಷ್ಟರಲ್ಲೇ
ಪ್ರಕಟವಾಗಲಿದೆ. ಅಲ್ಲಿಯ
ತನಕ ಇದನ್ನು ಸುಮ್ಮನೆ ಓದಿಕೊಳ್ಳಿ. ಸುಮಾರು ಮೂರೂವರೆ ದಶಕದ ಹಿಂದೆ ಅವರು ಆಡಿರುವ ಮಾತು
ಇವತ್ತಿನ ಕಾವ್ಯಕ್ಕೂ ಅನ್ವಯಿಸುತ್ತದೆ ಎಂದು ನಿಮಗೆ ಅನ್ನಿಸಿದರೆ, ಕಾವ್ಯ ನಿಂತ
ನೀರಾಗಿದೆ ಅನ್ನೋಣವೇ
ಅಥವಾ ಅನಂತಮೂರ್ತಿಯವರು ತುಂಬ ಫ್ಯೂಚರಿಸ್ಟಿಕ್ ಅನ್ನುತ್ತೀರಾ..
-ಜೋಗಿ
Posted by ಗಿರೀಶ್ ರಾವ್, ಎಚ್ (ಜೋಗಿ) at 5:09 PM 0 comments
Wednesday, August 8, 2007
ಕತೆ ಹೇಳುವುದು ಒಂದು ಒಳ್ಳೆಯ ಕೆಲಸ