ಮೊನ್ನೆ ಮೊನ್ನೆಯಷ್ಟೇ ಜಯಂತನ ಶಬ್ದತೀರ ಬಿಡುಗಡೆಯ ದಿನ ಮೊದಲ ಬಾರಿಗೆ ತೇಜಸ್ವಿಯವರನ್ನು ಭೇಟಿ ಮಾಡಿದ್ದೆ. ಅವರು ಬರುತ್ತಾರೆಂಬ ನಿರೀಕ್ಷೆ ಅಂದು ಯಾರಿಗೂ ಇರಲಿಲ್ಲ. ಬಹುಶಃ ಇಂಥ ಸಮಾರಂಭಗಳಿಗೆ ಅವರು ಬರುವುದಿಲ್ಲವೆಂದೇ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬಹುದಾದ ಸಾಧ್ಯತೆಯ ಬಗ್ಗೆ ಯಾರೂ ಯೋಚಿಸಿರಲಿಕ್ಕಿಲ್ಲ. ನಿಜಕ್ಕೂ ನಾನು ತೇಜಸ್ವಿಯವರನ್ನು ಹೊರಗೆ, ಸೆಮಿನಾರುಗಳಲ್ಲಿ, ವೇದಿಕೆಯ ಮೇಲೆ ನೋಡಿದ ನೆನಪೇ ಇಲ್ಲ. ಆದರೆ ಅವರು ಸರ್ವಾಂತರ್ಯಾಮಿ. ಅವರ ಪುಸ್ತಕಗಳು ಅವರಿಗಿಂತ ಹೆಚ್ಚಿನ ಮಾತುಗಳನ್ನಾಡಿದುವು, ಅವರಿಗಿಂತ ಹೆಚ್ಚು ಕಂಡವು. ಅದಕ್ಕೇ ಏನೋ ಆದಿನ ಅವರು ಅನಿರೀಕ್ಷಿತವಾಗಿ ಅಲ್ಲಿಗೆ ಬಂದಾಗ ಜಯಂತ “ದೇವರು ಪ್ರತ್ಯಕ್ಷವಾಗುವುದನ್ನು ನಾವು ಕಥೆಗಳಲ್ಲಿ ಓದಿದ್ದೇವೆ, ಸಿನೇಮಾದಲ್ಲಿ ನೋಡಿದ್ದೇವೆ.. ಆದರೆ ಅದು ಏನೆನ್ನುವುದು ಈ ದಿನ ನಮಗೆ ಅರ್ಥವಾಯಿತು” ಅಂದ. ಅನಿರೀಕ್ಷಿತವಾಗಿ ಬಂದದ್ದಲ್ಲದೇ ಜಯಂತನ ಬಗ್ಗೆ ಪ್ರಾಮಾಣಿಕವಾದ ಮಾತುಗಳನ್ನು ತೇಜಸ್ವಿ ಆಡಿದರು. ತನ್ನ ಕಥನ ಸಂಭ್ರಮದ
ಲೋಲುಪತೆಯಲ್ಲೇ ಮುಳುಗಿದರೆ ಉಂಟಾಗಬಹುದಾದ ಏಕತಾನತೆಯ ಬಗ್ಗೆ ಎಚ್ಚರ ನೀಡಿದರು. ಆನಂತರ ಅಲ್ಲಿದ್ದ ಅನೇಕರೊಡನೆ ಮಾತಾಡಿ, ಕೇಳಿದವರಿಗೆಲ್ಲಾ ಹಸ್ತಾಕ್ಷರ ನೀಡಿ ಅಂತರ್ಧಾನರಾದರು.
ತೇಜಸ್ವಿ ತಮ್ಮ ಸಮಯದ ಲೇಖಕರಿಗಿಂತ ಭಿನ್ನವಾಗಿ ಬರೆದರು ಅನ್ನುವುದು ಎಲ್ಲ ಬರಹಗಾರರ ಬಗ್ಗೆಯೂ ಕೇಳಿಬರುವ ಮಾತು. ತೇಜಸ್ವಿ ತಮ್ಮ ಸಮಯದ ಬರಹಗಾರರಿಗಿಂತ ಭಿನ್ನವಾಗಿ ಜೀವಿಸಿದರು ಅನ್ನುವುದು ಸರಿಯಾದ ಮತೇನೋ. ಮೂಡಿಗೆರೆಯಲ್ಲಿ ಇದ್ದು ಪರಿಸರದೊಂದಿಗೆ ಒಂದಾಗಿ ಸಾಹಿತ್ಯವನ್ನಲ್ಲದೇ ಅನೇಕ ಆಸಕ್ತಿಗಳನ್ನು ಬೆಳೆಸಿಕೊಂಡಿದ್ದ ಅವರು ಯಾವ ಗುಂಪಿಗೂ ಸೇರಲಿಲ್ಲ. ಒಂದಿಷ್ಟು ಕಾಲ ಲಂಕೇಶ್ ಜೊತೆ ಇದ್ದಂತೆ ಕಂಡರೂ ಇರಲಿಲ್ಲ. ಅವರ ಕಥಾಸಾಹಿತ್ಯ ಕಾದಂಬರಿಗಳು ಎಷ್ಟು ಕನ್ನಡಕ್ಕೆ ಮುಖ್ಯವೋ, ಪರಿಸರದ ಬಗೆಗಿನ ಅವರ ಲೇಖನಗಳು, ಅವರ ಪ್ರಕಾಶನ ಕಾರ್ಯ, ಅವರ ಫೊಟೊಗ್ರಫಿ ಕೂಡಾ ಅಷ್ಟೇ ಮುಖ್ಯ..
ಅವರ ಸಾಹಿತ್ಯವನ್ನು ಅದ್ಭುತವಾಗಿ ದೃಶ್ಯಮಾಧ್ಯಮಕ್ಕೆ ಇಳಿಸಲು ಸಾಧ್ಯವಾಗುತ್ತಿದ್ದದ್ದು ಬಹುಶಃ ಕಾಸರವಳ್ಳಿಗೆ ಮಾತ್ರ. ತಬರನ
ಕಥೆಯನ್ನು ನಾವು ಓದಿದರೆ ದೃಶ್ಯ ಮಾಧ್ಯಮದ ನಿಟ್ಟಿನಿಂದ ಅದು ನಿಜಕ್ಕೂ ಒಂದು ಸಾಧಾರಣ ಕಥೆ. ಆದರೆ ಕಾಸರವಳ್ಳಿ ಕೈಯಲ್ಲಿ ಅದು ಒಂದು ಅದ್ಭುತ ಚಿತ್ರವಾಗಿ ಮಾರ್ಪಾಡಾಗಿದ್ದಕ್ಕೆ ಕಾಸರವಳ್ಳಿಯ ಸೃಜನಶೀಲತೆ ಎಷ್ಟು ಕಾರಣವೋ, ಅಷ್ಟೇ ತೇಜಸ್ವಿಯವರ ಇತರ ಕಥೆಗಳು ಅನ್ನಬೇಕು. ಹಾಗೆ ನೋಡಿದರೆ ತಬರನ ಕಥೆಯಲ್ಲಿ ತುಕ್ಕೋಜಿ ಕಥೆಯ ಎಷ್ಟೊಂದು ಅಂಶಗಳಿವೆ!
ಮೊದಮೊದಲ ಕಥೆಗಳಲ್ಲಿ ತೇಜಸ್ವಿ ನವ್ಯ ರಂತೆ ಕಂಡರೂ ಆ ನಂತರದ ಕಥೆಗಳು ಯಾವ ಪಂಥಕ್ಕೂ ಸೇರಿಲ್ಲವೆಂಬಂತೆ ತಮ್ಮ ದಾರಿಯನ್ನೇ ಪಡೆದವು. ಬಹುಶಃ ಕನ್ನಡದಲ್ಲಿ ಪರಿಸರದ ಬಗ್ಗೆ ಪ್ರಜ್ಞೆಯನ್ನು ಮೊದಲಬಾರಿಗೆ ತಂದವರೇ ತೇಜಸ್ವಿ ಅಂತ ನನಗನ್ನಿಸುತ್ತದೆ. ಕರ್ವಾಲೋ ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು ಅಂತ ಅನೇಕ ವಿಮರ್ಶಕರು ಗುರುತಿಸಿದ್ದಾರೆ. ಆದರೆ ಕರ್ವಾಲೋವನ್ನು ಇಂಗ್ಲೀಷ್ನಲ್ಲಿ ಓದಿದಾಗ ನನಗ ಸಾಕಷ್ಟು ನಿರಾಸೆಯಾಯಿತು. ಅವರ ಚಿದಂಬರ ರಹಸ್ಯ ಕಾದಂಬರಿಗೆ ಸಿಗಬೇಕಾಗಿದ್ದ ಮಾನ್ಯತೆಯೆಲ್ಲಾ ಕರ್ವಾಲೋಗೆ ಸಿಕ್ಕಿಬಿಟ್ಟಿತೇನೋ.
ತೇಜಸ್ವಿ ತಮ್ಮ ಅದ್ಭುತ ಸಾಹಿತ್ಯದಿಂದಾಗಿ ನಮ್ಮ ನಡುವೆ ಇದ್ದಾರೆ. ಅವರು ಕುವೆಂಪು ಮತ್ತು ಕಾರಂತರನ್ನು ಒಳಗೊಂಡ ಲೇಖಕರು ಅಂತ ಅನಂತಮೂರ್ತಿ ಹೇಳಿದರಂತೆ. ನನಗೇನೋ ಅವರಲ್ಲಿ ಕುವೆಂಪುಗಿಂತ ಕಾರಂತರೆ.. ಅದರಲ್ಲೂ ವಿಕಸಿತ
ಕಾರಂತರೇ ಕಾಣುತ್ತಾರೆ. ವಿಕಸಿತ ಕಾರಂತರು ಅನ್ನುವುದಕ್ಕೆ ಒಂದೇ ಕಾರಣ.. ತೇಜಸ್ವಿಯವರ ಭಾಷೆ ಮತ್ತು ಕಥನಕಲೆ ಹೆಚ್ಚು ಎಂಗೇಜಿಂಗ್ ಆಗಿ ಇರುತ್ತಿತ್ತು.
ಕುವೆಂಪು ಅವರಿಗೆ ಪುಟ್ಟಪ್ಪ ಅನ್ನುವ ಪುಟ್ಟ ಹೆಸರಿದ್ದರೂ ಅವರು ಅದನ್ನು ದೊಡ್ಡಹೆಸರನ್ನಾಗಿ ಮಾಡಿಕೊಂಡರು. ಆದರೆ ತಮ್ಮ ಮಕ್ಕಳಿಗೆ ಪುಟ್ಟ ಹೆಸರಿನ ರಿಸ್ಕ್ ಬೇಡವೆಂದೋ ಏನೋ ಇಬ್ಬರಿಗೂ ದೊಡ್ಡಹೆಸರುಗಳನ್ನೇ ಇಟ್ಟರು.. ಕೋಕಿಲೋದಯಚೈತ್ರ ಮತ್ತು ಪೂರ್ಣಚಂದ್ರತೇಜಸ್ವಿ. [he has not named them, he has sentenced them... for life ಅಂತ ವೈಎನ್ಕೆ ಹೇಳಿದ್ದು ಇಲ್ಲಿ ನೆನಪಾಗುತ್ತಿದೆ]. ಆದರೆ ಪೂರ್ಣಚಂದ್ರತೇಜಸ್ವಿ ತಮ್ಮ ತಂದೆ ಕೊಟ್ಟ ದೊಡ್ಡ ಹೆಸರನ್ನು ಉಳಿಸಿಕೊಂಡರು, ಬೆಳೆಸಿಕೊಂಡರು. ಗಿಡಮರಗಳ ಮರೆಯಲ್ಲಿ.. ಇಷ್ಟು ದಿನವೂ ಕಾಣದೇ ನಮ್ಮನ್ನೆಲ್ಲಾ ಹುರಿದುಂಬಿಸುತ್ತಾ, ಪ್ರೇರೇಪಿಸುತ್ತಾ, ಸ್ಫೂರ್ತಿ ನೀಡುತ್ತಾ ಇದ್ದ ತೇಜಸ್ವಿ ಆ ಕೆಲಸವನ್ನು ಮುಂದುವರೆಸುತ್ತಿದ್ದಾರೆ. ತೇಜಸ್ವಿ ಇದ್ದಾರೆ.
ತೇಜಸ್ವಿಯವರು ಒಂದು ಹಳೆಯ ಕವಿತೆ ಇಲ್ಲಿದೆ. ಕೃಪೆ: ಲಂಕೇಶ್ ಸಂಪಾದಿಸಿದ ಅಕ್ಷರ ಹೊಸ ಕಾವ್ಯ
- ಸುಶ್ರುತ ದೊಡ್ಡೇರಿಹೇಳಿದ್ದು…
- ಅಲ್ಲವಾ? ತೇಜಸ್ವಿ ಇಲ್ಲವೆಂದರೆ ಹೇಗೆ ನಂಬುವುದು? ಅವರು ನಮ್ಮೊಂದಿಗೇ ಇದ್ದಾರೆ… ತೇಜಸ್ವಿ ನನ್ನೊಂದಿಗೇ ಇದ್ದಾರೆ…
- Friday, 06 April, 2007
- ಇಸ್ಮಾಯಿಲ್ಹೇಳಿದ್ದು…
- ಕರ್ವಾಲೋದ ಇಂಗ್ಲಿಷ್ ಅನುವಾದಕ್ಕೆ ಸಂಬಂಧಿಸಿದಂತೆ ತೇಜಸ್ವಿಯವರ ಜತೆಗೇ ಮಾತನಾಡಿದ್ದೆ. ಅವರದನ್ನು ಚೆನ್ನಾಗಿ ಹೇಳಿದ್ದರು ‘ಅಸಡಾ ಬಸಡಾ ಕಾಲು ಹಾಕಿಕೊಂಡು ಬಂದ-ಅನ್ನುವುದನ್ನು ಅವರಾದರೂ ಹೇಗೆ ಇಂಗ್ಲಿಷಿಗೆ ಮಾಡುತ್ತಾರೋ’. ಇದು ತೇಜಸ್ವಿಯವರ ಎಲ್ಲಾ ಕೃತಿಗಳ ಶಕ್ತಿ ಅಥವಾ ಮಿತಿ. ಸಲೀಸಾಗಿ ಇಂಗ್ಲಿಷಿಗೆ ಅನುವಾದಿಸಲಾಗದ ಅವರ ಕೃತಿಗಳೇ ಅವರನ್ನು ತಥಾಕಥಿತ ಆಲ್ ಇಂಡಿಯಾ ಲೇಖಕನನ್ನಾಗಿಸಲಿಲ್ಲ ಅನ್ನಿಸುತ್ತದೆ. ಇದನ್ನು ಕುವೆಂಪು ಅವರಿಗೂ ಅನ್ವಯಿಸಬಹುದು. ಕುವೆಂಪು ಅವರ ಕಾನೂರು ಹೆಗ್ಗಡತಿಯೂ ಇಂಗ್ಲಿಷಿಗೆ ಅನುವಾದವಾಗಿದೆ. ಅದೊಂದು ತರಾ ಕಾನೂರು ಹೆಗ್ಗಡತಿಯ ಕ್ಯಾರಿಕೇಚರ್ ನಂತೆ ಕಾಣಿಸುತ್ತದೆ. ವೈಕಂ ಮಹಮ್ಮದ್ ಬಷೀರ್ ರ ‘ನನ್ನಜ್ಜನಿಗೊಂದಾನೆಯಿತ್ತು’ನ್ನು ಕನ್ನಡದಲ್ಲಿ ಓದಿದಾಗಲೂ ನನಗೆ ಹೀಗೇ ಅನ್ನಿಸಿತ್ತು.
ಕನ್ನಡ ವಿಮರ್ಶೆ ಹೇಗಿದೆಯಪ್ಪಾ ಅಂದರೆ ಕರ್ವಾಲೋ ಕಾದಂಬರಿಯಲ್ಲಿ ಏನೇನನ್ನೋ ಗುರುತಿಸಿ ಅದು ಕನ್ನಡದ ಏಕೈಕ ಸೈನ್ಸ್ ಫಿಕ್ಷನ್ ಎಂಬುದನ್ನು ಮಾತ್ರ ಮರೆತುಬಿಟ್ಟಿತು (ನಾನು ಕನ್ನಡದಲ್ಲಿರುವ ವೈಜ್ಞಾನಿಕ ಕಾದಂಬರಿಗಳ ಬಗ್ಗೆ ಹೇಳುತ್ತಿಲ್ಲ).
ತೇಜಸ್ವಿ ಭಿನ್ನವಾಗಿ ಬದುಕಿದರು ಎಂಬ ನಿಮ್ಮ ಅಭಿಪ್ರಾಯ ನೂರಕ್ಕೆ ನೂರರಷ್ಟು ಸರಿಯಾದುದು.
- Saturday, 07 April, 2007
- ಇಸ್ಮಾಯಿಲ್ಹೇಳಿದ್ದು…
- ಕಾಸರವಳ್ಳಿಯವರು ತೇಜಸ್ವಿಯವರ ಕತೆಗಳನ್ನು ಚೆನ್ನಾಗಿ ಸಿನಿಮಾ ಮಾಡುತ್ತಿದ್ದರು ಎಂಬ ನಿಮ್ಮ ಹೇಳಿಕೆ ಸ್ವಲ್ಪ ಮಟ್ಟಿಗೆ ಮಾತ್ರ ಸರಿ. ಕಾಸರವಳ್ಳಿ ಯಾವಾಗಲೂ ತೇಜಸ್ವಿಯವರ ಕೃತಿಗಳಲ್ಲಿರುವ ವಿಟ್ ನ ಅಂಶವನ್ನು ಗ್ರಹಿಸಲಿಲ್ಲ ಎಂದು ನನ್ನ ಅನಿಸಿಕೆ.
- Saturday, 07 April, 2007
- ಹೇಳಿದ್ದು…
- ಇಸ್ಮಾಯಿಲ್ ಹೇಳಿದ್ದು ಸರಿ. ನನಗದು ಹೊಳೆದಿರಲಿಲ್ಲ. ಆದರೆ ತಬರನ ಕತೆಯಲ್ಲಿ ವಿಟ್ ಗಿಂತ ಜಾಸ್ತಿ ವಿಷಾದ ಇತ್ತು.ವಿಟ್ ಇತ್ತೋ ಇಲ್ಲವೋ ನೆನಪು ಕೂಡ ಆಗದಂತೆ ಮಾಡಿದೆ ಆ ಸಿನಿಮಾ.
ಅನುವಾದದ ಬಗ್ಗೆ ನೀವು ಹೇಳಿದ್ದನ್ನು ನಾನು ಒಪ್ಪುವುದಿಲ್ಲ. ಅಸಡಾಬಸಡಾ ಕಾಲು ಹಾಕಿಕೊಂಡು ಬಂದ ಅನ್ನುವುದಕ್ಕಿಂತ ಒಳ್ಳೆಯ ಪದ ಇಂಗ್ಲಿಷಿನಲ್ಲೂ ಇರಬಹುದು. ಅನುವಾದಕ ಅದನ್ನು ಗ್ರಹಿಸಿ ಬರೆಯುವಷ್ಟು ಶಕ್ತನಾಗಬೇಕು.
ನನ್ನ ಪ್ರಕಾರ ತೇಜಸ್ವಿ ಕತೆಯ ಭಾಷೆಗಿಂತಲೂ ಅವರು ಕಟ್ಟಿಕೊಡುವ ಸಂದರ್ಭ ಮುಖ್ಯ. ಅದನ್ನು ಯಾವ ಭಾಷೆಯಲ್ಲಿ ಹೇಳಿದರೂ ಇಷ್ಟವಾದೀತು.
ಜೋಗಿ
- Sunday, 08 April, 2007
- yashaswiniಹೇಳಿದ್ದು…
- ಶ್ರೀರಾಮ್,
ದಯವಿಟ್ಟು ನೀವು ಕನ್ನಡದಲ್ಲಿ ಕರ್ವಾಲೋವನ್ನು ಓದಬೇಕೆಂದು ಕೋರುತ್ತೇನೆ. ‘ಚಿದಂಬರ ರಹಸ್ಯ’ ಮತ್ತು ‘ಕರ್ವಾಲೋ’ ಬೇರೆ ಬೇರೆ ಕಾರಣಕ್ಕಾಗಿಯೇ ಮುಖ್ಯವಾದದ್ದು ಎಂದು ನನ್ನ ಅಭಿಪ್ರಾಯ.
ಇಸ್ಮಾಯಿಲ್ ಅವರು ಕರ್ವಾಲೋ ಅನ್ನು ಸೈನ್ಸ್ ಫ಼ಿಕ್ಷನ್ ಎಂದು ಕರೆದಿದ್ದಾರೆ.ಅದು ಹೌದೋ ಅಲ್ಲವೋ!ಆದರೆ ಅದರಲ್ಲಿ ಬರುವ ಪ್ರತಿಯೊಬ್ಬ ಮನುಷ್ಯನ ಅರಿವಿನ ಭಿನ್ನತೆ ಮತ್ತು ಮಿತಿ ಮತ್ತು ಅದರ ಅಸಂಗತ ಪ್ರಜ್ಞೆಗಳೊಡನೆ ಜೊತೆಯಾಗಿ ಸಾಗಲೇಬೇಕಾದ ನಿಸರ್ಗದ ಆಯ್ಕೆಯ ರೀತಿ,ಅದನ್ನು ತೇಜಸ್ವಿ ತಟಸ್ಥವಾಗಿ ಅನಾವರಣಗೊಳಿಸುವ ಬಗೆ ಮನಸ್ಸನ್ನು ತಟ್ಟದೇ ಇರುವುದಿಲ್ಲ.ಅದೊಂದು ಅತ್ಯಂತ ಅನನ್ಯವಾದ ಕೃತಿ.ಅದನ್ನು ಇಂಗ್ಲಿಷಿಗೆ ಅನುವಾದಿಸಲಾಗದೇ ಇದ್ದರೆ ಹೋಯಿತು!.
***
ತೇಜಸ್ವಿಯವರಲ್ಲಿನ ಕಾರಂತರು,ಸಾಹಿತ್ಯದ ಕಾರಂತರಿಗಿಂತ,’ಹುಚ್ಚುಮನಸ್ಸಿನ ಹತ್ತುಮುಖಗಳ’ಕಾರಂತರು ಇರಬೇಕು.
***
ಕಾಯ್ಕಿಣಿ ಮತ್ತು ತೇಜಸ್ವಿಯವರನ್ನು ಮತ್ತೆ ಇಲ್ಲಿ ನೋಡಿದ್ದು,ಚಿತ್ರಕಲಾ ಪರಿಷತ್ತಿನಲ್ಲಿ ಕಾಯ್ಕಿಣಿ ನಡೆಸಿಕೊಟ್ಟ ತೇಜಸ್ವಿಯವರೊಡನೆ ಸಂವಾದ ಕಾರ್ಯಕ್ರಮವನ್ನು ನೆನಪಿಸಿಕೊಟ್ಟಿತು.
ಕಾರಂತ ಸುಬ್ಬಣ್ಣ ತೇಜಸ್ವಿ ಒಟ್ಟಾಗಿರೋ ಚಿತ್ರ ಎಲ್ಲಾದರೂ ಕಂಡೀತೇ!!
ವಂದನೆಗಳು
ಯಶಸ್ವಿನಿ.
- Sunday, 08 April, 2007
- Guruಹೇಳಿದ್ದು…
- ಶ್ರೀರಾಮ್,
ಕರ್ವಾಲೋದ ಇಂಗ್ಲಿಶ್ ಅನುವಾದದ ಬಗ್ಗೆ ನೀವು, ಇಸ್ಮಾಯಿಲ್, ಜೋಗಿ ಇತರೆಯವರು ಮಾತಾಡುತ್ತಿದ್ದಾಗ ಕೊಂಚ ಅಪ್ರಸ್ತುತವೆನ್ನಿಸಿದರೂ ಇಲ್ಲಿ ಹೇಳುತ್ತೇನೆ. ಕೆಲವು ಅನುವಾದಗಳಿಗೂ ಮೀರಿದ ನುಡಿಗಟ್ಟುಗಳು ಕನ್ನಡದಲ್ಲಿವೆ ಅನ್ನಿಸುತ್ತದೆ. ಮರಳಿ ಮಣ್ಣಿಗೆ ಯ ಇಂಗ್ಲಿಶ್ ಅವತರಣಿಕೆಯಲ್ಲಿ ಮಾವಿನ ತೋರಣ, ತೆಂಗಿನ ಚಪ್ಪರದ ಇಂಗ್ಲಿಶ್ ಅನುವಾದಕ್ಕೆ ಅನುವಾದಕರು ಕಷ್ಟಪಟ್ಟಿದ್ದಾರೆ. ಹಾಗೆಯೇ ‘ಸಂಸ್ಕಾರ’ದ ಇಂಗ್ಲಿಶ್ ಅನುವಾದದಲ್ಲಿ ಒಂದುಕಡೆ ಸನ್ಯಾಸಿಯ ಕೌಪೀನ ಅನ್ನುವುದನ್ನು ಎ. ಕೆ. ರಾಮಾನುಜನ್ರವರು hermit’s G-string ಎಂದಿದ್ದಾರೆ. ಹಾಗೆಯೇ ಸಂಸ್ಕಾರದ ಇನ್ನಿತರ ಇಂಗ್ಲೀಷ್ ಪದಗಳು ಕೊನೆಗೆ ಅನುಸೂಚಿಯಲ್ಲಿ ಕೊಟ್ಟಿದೆ. ಕೆಲವೇ ಉದಾಹರಣೆ ಕೊಡುವುದೆಂದರೆ, ಪಂಚಾಮೃತ= five fold nectar ಆಪೋಶನ= consecrated water ಇನ್ನೂ ಇತರೆ.
ಇನ್ನೂ ಒಂದು ಕುತೂಹಲ ತರಿಸುವ ಸಂಗತಿಯೆಂದರೆ, ‘ನನ್ನನ್ನು ಏಕವಚನದಲ್ಲಿ ಮಾತಾಡಿಸಬೇಡ, ಮರ್ಯಾದೆಯಿಂದ ಬಹುವಚನದಲ್ಲಿ ಮಾತಾಡಿಸು’ ಎನ್ನುವುದನ್ನು Do not use Singular. Give me respect and use plural ಎಂದು ರಾಮಾನುಜನ್ ಅನುವಾದಿಸಿರುವುದನ್ನು ಓದಿದ ಕೆಲವು ‘ಹೊರಗಿನ’ ಓದುಗರು ಈ plural ಬಹುವಚನವನ್ನು ಸೂಚಿಸುತ್ತದೆಯೋ ಅಥವಾ ಮರ್ಯಾದೆಯನ್ನು ಸೂಚಿಸುತ್ತದೆಯೋ ಎಂದು ಗೊಂದಲಗೊಂಡಿಯೂ ಇದ್ದಾರೆ.
ಅನುವಾದ ಅಷ್ಟು ಸುಲಭವಲ್ಲ ಅನ್ನುವುದಕ್ಕೆ ಮಾತ್ರ ಈ ಉದಾಹರಣೆಯನ್ನು ಬಳಸಿದ್ದು.
ತೇಜಸ್ವಿಯವರನ್ನು ನೆನೆಸಬೇಕಾಗಿತ್ತು. ಸಂಸ್ಕಾರವನ್ನು ನೆನೆಸಿದೆವು. ಅನುವಾದದ ಬಗ್ಗೆ ಮಾತಾಡಿದೆವು.
ತೇಜಸ್ವಿಯವರು ನಗುತ್ತಿರಬಹುದು.
ಗುರು ಕಾಗಿನೆಲೆ
- Sunday, 08 April, 2007
- Jogimaneಹೇಳಿದ್ದು…
- ಪ್ರಿಯ ಗುರು,
ಯಶಸ್ವಿನಿಯವರು ಹೇಳಿದ್ದು ಸರಿಯಾಗಿದೆ. ನಾವು ಕನ್ನಡದ ಕಾದಂಬರಿಗಳನ್ನು ಕನ್ನಡದಲ್ಲೇ ಓದಬೇಕು. ಅದರ ಅನುವಾದ ಕೆಟ್ಟದಾಗಿದ್ದರೆ ಅದು ಕನ್ನಡ ಬರದೇ ಇರುವವರ ದುರಂತ ಎಂದು ಭಾವಿಸಬೇಕು. ನಮಗೆ ಕನ್ನಡ ಬರೋದರಿಂದ ಇಂಥ ಒಳ್ಳೆಯ ಕೃತಿಗಳು ನಮಗೆ ಸಿಗುತ್ತಿವೆ ಅಂತ ನಾವು ಸಂತೋಷಪಡೋಣ.
ಇಲ್ಲಿಂದ ಇಂಗ್ಲಿಷಿಗೆ ಅನುವಾದವಾಗುವ ಕಾದಂಬರಿಗಳ ಬಗ್ಗೆ ನಾವೇಕೆ ತಲೆಕೆಡಿಸಿಕೊಳ್ಳೋಣ. ಅಷ್ಟಕ್ಕೂ ಯುರೋಪು ಅಮೇರಿಕಾಗಳಲ್ಲಿ ಸಾಹಿತ್ಯದ ಮಾನದಂಡವೇ ಬೇರೆ. ಅವರಿಗೆ ರಾಜಕೀಯವಾಗಿ ಮುಖ್ಯವಾಗುವ ಲೇಖಕರು ಸಾಹಿತ್ಯಿಕವಾಗಿಯೂ ಮುಖ್ಯವಾಗುತ್ತಾರೆ. ನಮ್ಮ ಹಾಗೆ ಒಬ್ಬ ಲೇಖಕನನ್ನು ಸುಮ್ಮನೆ ಮೆಚ್ಚುವುದಕ್ಕೆ ಅವರಿಗೆ ಸಾಧ್ಯವಾಗುವುದಿಲ್ಲವೇನೋ.
ರಶ್ಡೀ, ಅರುಂಧತಿ ರಾಯ್ ನೋಡಿ.
ಜೋಗಿ
- Sunday, 08 April, 2007
- yashaswiniಹೇಳಿದ್ದು…
- ಗುರು ಅವರು ಅನುವಾದದ ಕುರಿತು ಹೇಳಿರುವುದರ ಕುರಿತು ನನ್ನ ಸಹಮತವಿದೆ.ಯಾವ ಭಾಷೆಯಿಂದ ಮತ್ಯಾವ ಭಾಷೆಗೂ ಅನುವಾದ ಕಷ್ಟವೇ.ಒಂದು ಪದಪುಂಜ ನಮ್ಮಲ್ಲಿ ಹುಟ್ಟಿಸುವ ಭಾವ ಅದರ ಮಣ್ಣಿನ ಸೊಗಡಿನಿಂದಲೇ ಮೂಡಿರುತ್ತದೆ.ಒಂದು ಪ್ರದೇಶದ ಜಾನಪದ,ಮಿಥಕಗಳು,ವಿಶಿಷ್ಟ ನಡೆನುಡಿಗಳು- ಇವುಗಳ ಪರಿಚಯವಿಲ್ಲದೆ ಆ ಪ್ರದೇಶದ ಕಥನವನ್ನು ಸಂಪೂರ್ಣವಾಗಿ ಆಸ್ವಾದಿಸುವುದು ಅಸಾಧ್ಯ.ಇದು ಎಲ್ಲಾ ಶ್ರೇಷ್ಠ ಸಾಹಿತ್ಯಕ್ಕೆ ಅನ್ವಯವಾಗುವಂಥದ್ದು ಎಂದು ನನ್ನ ಅನ್ನಿಸಿಕೆ. ಅಷ್ಟೇ ಅಲ್ಲದೆ ಈ ಕಾರಣಕ್ಕೇ ನಮಗೆ ನಮ್ಮ ಭಾಷೆ ಆಪ್ತವಾಗಬೇಕು,(ಮತ್ತು ಜಾಗತೀಕರಣದ ಕುರಿತು ದಿಗಿಲಾಗಬೇಕು.)ಅಂತ ನನಗೆ ತೋರುತ್ತದೆ.
ಮಾಸ್ತಿಯವರದ್ದು ಭಾಷೆ ಸರಳವಾಗಿದ್ದೇ ಅವರ ಕೃತಿಗಳ ಅನುವಾದ ಸಂಪೂರ್ಣ ಸಮಾಧಾನಕೊಟ್ಟಿಲ್ಲ.ಹಾಗೇ ಭಟ್ಟರ ‘ಚಿನ್ನದ ಹಕ್ಕಿ’ ಏಟ್ಸ್ ಕವಿದು.
ಮರಳಿ ಮಣ್ಣಿಗೆ,ಮೂರ್ತಿರಾಯರೇ ಮಾಡಿದ್ದರೂ ಹಾಗೇ , ಯಾಕೋ ಸಮಾಧಾನ ಸಿಗಲಿಲ್ಲ.
ಹಾಗಂತ ಕೆಲವೊಂದು ಅನುವಾದಗಳು ಖುಷಿಕೊಟ್ಟಿದೆ. ಉದಾ- ಪುಸ್ತಕ ಪ್ರಕಾಶನದ್ದೇ-ಅನಂತ ನಾರಾಯಣ ಎಂಬುವವರು ಲಾರಾ ಇಂಗಲ್ಸ್ ವೈಲ್ಡರ್ ಳ ‘ಲಿಟಲ್ ಹೌಸಸ್’ಎಲ್ಲಾ ಸಂಪುಟಗಳನ್ನು ಅನುವಾದ ಮಾಡಿದ್ದಾರೆ. ಅದು ಮೂಲದಷ್ಟೇ ಸೊಗಸಾಗಿ ಬಂದಿದೆ.
ತೇಜಸ್ವಿಯವರೇ ಕೆನೆತ್ ಆಡರ್ಸನ್ದು ಅನುವಾದ ಮಾಡಿದ್ದಾರೆ,ನನಗೇನೋ ಅದು ಮೂಲಕ್ಕಿಂತ ಹೆಚ್ಚು ಜೀವಂತವಾಗಿ ಸ್ವಾರಸ್ಯವಾಗಿ ಕಂಡಿದೆ.ನನ್ನ ಮಟ್ಟಿಗೆ ಅನುವಾದಗಳ ಲೋಕದಲ್ಲಿ ಅದೊಂದು ಅಪೂರ್ವ ಅನುಭವ.
ವಂದನೆಗಳು
ಯಶಸ್ವಿನಿ
- Monday, 09 April, 2007
- ಇಸ್ಮಾಯಿಲ್ಹೇಳಿದ್ದು…
- ಗುರುಪ್ರಸಾದ್ ರಾಮನುಜನ್ ಅವರ ಅನುವಾದದ ಬಗ್ಗೆ ಪ್ರಸ್ತಾಪಿಸಿರುವುದರಿಂದ ಈ ಮಾತು.
ರಾಮಾನುಜನ್ ಅವರ ವಚನಗಳ ಅನುವಾದಕ್ಕೂ ಇಂಥದ್ದೇ ಅನೇಕ ಮಿತಿಗಳಿವೆ. ವಚನದ ಮೇಲ್ಮೈಯನ್ನು ಮಾತ್ರ ಅನುವಾದ ಮಾಡಿಬಿಟ್ಟರೇನೋ ಎಂದು ಅನ್ನಿಸಿಬಿಡುತ್ತದೆ. ಆದರೆ ಆ ಪ್ರಯತ್ನಕ್ಕೂ ಒಂದು ಮಹತ್ವವಿದೆ. ಇತ್ತೀಚೆಗೆ (ನಾಲ್ಕೈದು ವರ್ಷಗಳೇ ಆದವೇನೋ?)ವಿನಯ ಚೈತನ್ಯ ಅವರು ಅಕ್ಕನ ವಚನಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಈ ವಚನಗಳ ಧ್ವನಿಯನ್ನು ಅವರು ಅಕ್ಕ ನೀಡುವ ವಿವರಗಳ ಜತೆಗೇ ಇಂಗ್ಲಿಷ್ ನಲ್ಲಿ ಪ್ರಸ್ತುತ ಪಡಿಸಲು ಪ್ರಯತ್ನಿಸಿದ್ದಾರೆ. ರಾಮಾನುಜನ್ ಪ್ರಯತ್ನದ ಮುಂದುವರಿದ ಭಾಗದಂತೆ ಇರುವ ಈ ಅನುವಾದಗಳ ಬಗ್ಗೆ ಹೆಚ್ಚು ಚರ್ಚೆ ನಡೆಯಬೇಕಾಗಿದೆ.
- Monday, 09 April, 2007
- ಹೇಳಿದ್ದು…
- Dear Shriram
Really nice one. Bit more on his first novel Swarup would have made this complete. This novel is contrast to his all other writings. It is interesting to understand the shift and the possibility of shift.
Thanks for captruing that so well
warm regards
ashok
- Monday, 09 April, 2007
- ಹೇಳಿದ್ದು…
- good one..
mattoMdu vishaya: ee vishayavannoo oLagoMdu, Kannada-Kannadiga-Karnataka da beLavanigeya bagge Banavasi Balagada hosa blog nalli charche naDeyuttide. adannu ” http://enguru.blogspot.com” nalli noDabahudu
- Wednesday, 11 July, 2007
- ಹೇಳಿದ್ದು…
- nimma blog tumbaa channagide. It is very informative.
-Basavaraju
SOURCE: http://kannada-kathe.blogspot.com/
ತೇಜಸ್ವಿ ಇದ್ದಾರೆ ನಮ್ಮೆಲ್ಲರ ಹೃದಯದೊಳಗೆ, ಅವರ ಪುಸ್ತಕದೊಳಗೆ!
yeah v couldnt forget such a great legend